ಯಾಕೋ ಗೊತ್ತಿಲ್ಲ

ನೈಟ್ ಶಿಫ್ಟ್

ಮಧುರ ನೆನಪುಗಳನ್ನ
ಕಾಡುವುದೇ
ನೈಟ್ ಶಿಫ್ಟ್ ಕೆಲಸ ಆಗಿದೆ
ಎನ್ನ ಮನಸ್ಸಿಗೆ
***************

ಯಾಕೆ ಉಳ್ಕೊಂಡೆ ?
ಈ ಮಾತು ನಂದಂತೂ ಅಲ್ಲ...
ಜಸ್ಟ್ ಮಾತು ಮಾತಲ್ಲಿ ಮೂವಿ ನೋಡಿದೆ.
ಏಕೋ ಈ ಮಾತನ್ನು ಸ್ವಲ್ಪ ಹಚ್ಚಿಕೊಂಡಂತೆ ಕಾಣುತ್ತ ಇದೆ.
ಮತ್ತೆ ಮತ್ತೆ ಕೇಳಬೇಕೂಂತ ಆಗುತ್ತ ಇದೆ..
ಈ ಮನಸ್ಸೇ ಹೀಗೆ... ಏನೋ ಒಂದು ಸಿಕ್ಕರೆ ಸಾಕು..
ಮತ್ತೆ ಬಿಡಲ್ಲ....
ಹುಡುಕಾಡಿದೆ ... ಏನನ್ನೋ ??
***************

ಒಂಟಿತನ
ಅಬ್ಬ!!!
ದೆವ್ವ
ಭೂತಗಳನ್ನಾದರೂ
ಎದುರಿಸಬಲ್ಲೆ

ಒಂಟಿತನವನಲ್ಲ!
***************

ಅಪ್ಪ ಅಮ್ಮ ಅಕ್ಕ ನಾನು ತಮ್ಮ

ನಮ್ಮದೊಂದು ಚಿಕ್ಕ ಫ್ಯಾಮಿಲಿ...ಪ್ರತಿದಿನವೂ ಅಲ್ಲಿ ಲವಿಲವಿಕೆ , ಹೊಸ ಹುಮ್ಮಸ್ಸು, ಏನೋ ಚೈತನ್ಯ. ಒಂದು ಕಡೆ ಅಪ್ಪ ಯಾವಾಗಲೂ ಏನೋ ಒಂದು ಕೆಲಸದಲ್ಲಿ ನಿರತರ. ಏನಾದರೊಂದು ಮಾಡಬೇಕು. ಹೊಸ ಬಾಳೆ ಗಿಡ ನಡುವುದೋ, ದನಗಳಿಗೆ ಹುಲ್ಲು ತರುವುದೋ, ತೋಟದಿಂದ ತೆಂಗಿನ ಕಾಯಿ ತರೋದ.... ಅದರಲ್ಲೇನೆ ತುಂಬಾ ಸಂತೋಷ ಪಡಿತಾರೆ. ಮಾಡಿದ ಪ್ರತಿಯೊಂದು ಕೆಲಸದಲ್ಲೂ perfection . ಅಮ್ಮ ತಾನೇನು ಕಡಿಮೆ ಎಂಬಂತೆ ಪ್ರತಿ ನಿಮಿಷವೂ ವೇಸ್ಟ್ ಆಗಕ್ಕೆ ಬಿಡಲ್ಲ. ಫ್ರೀ ಟೈಮ್ ಸಿಕ್ಕರೆ ತನ್ನ ಮುದ್ದಿನ ನಾಯಿ,ಬೆಕ್ಕು, ದನ ಕರುಗಳೊಂದಿಗೆ ಆಟ ಆಡ್ತಾ ಇರ್ತಾಳೆ ನನ್ನ ಪುಟ್ಟ ಅಮ್ಮ. ಇವುಗಳಿಗೆಲ್ಲ ಊಟ , ನೀರು .. ಇವಳೇ ಕೊಡ್ಬೇಕು... ಯಾವಾಗಲೂ ಅಡಕೆ ತೋಟ ದಲ್ಲೋ ಹೂವಿನ ತೋಟದಲ್ಲೋ ಇರ್ತಾಳೆ. ನೀವೆಲ್ಲರೋ ಖುಷಿಯಾಗಿದ್ದರೆನೆ ನಾನು ಖುಷಿ ಎಂಬುದೇ ಅವಳ ಮಂತ್ರ. ಹೀ ಹೀ ಅಂತ ನಗ್ತಾಳೆ ನಾನು ಪ್ರತಿ ಸಲ ಫೋನ್ ಮಾಡಿದಾಗಲೂ. ಏನೋ ಅಭಿಮಾನ, ಪ್ರೀತಿ, ಖುಷಿ ಅವಳಿಗೆ ... ಅವಳೇ ನನ್ನ ಮುದ್ದಿನ ಅಕ್ಕ. ನೋಡಲು ಚಿಕ್ಕವಳಾಗಿದ್ದರೂ ದೊಡ್ಡ ಅಕ್ಕ. ಮತ್ತೊಬ್ಬ ಬ್ಯುಸಿ ಮ್ಯಾನ್ ಬಿಸಿನೆಸ್ ಮ್ಯಾನ್ ನನ್ನ ಪ್ರೀತಿಯ ತಮ್ಮ . ಜೀವನದಲ್ಲಿ ಏನೋ ಮುಂದು ಬರಬೇಕೆಂಬ ಉತ್ಸಾಹ.. ನನ್ನ ತಮ್ಮನೂ ಹೌದು... ನನ್ನ ಪ್ರಾಣ ಗೆಳಯನೂ ಹೌದು.

 
ಮೊನ್ನೆ ನಾನ ವಿದೇಶ ಪ್ರಯಾಣ ವಿಷಯ ಅಮ್ಮನಿಗೆ ಹೇಳಿದಾಗ... ಈ ಸಲ ಎಷ್ಟು ಸಮಯ ಇರ್ಬೇಕು? ನಾನಂದೆ ಎರಡು ಮೂರು ತಿಂಗಳೇ ಅಸ್ಟೇ ಅಂದಾಗ ಏನೋ ಸಮಾಧಾನ ಅವಳಿಗೆ. ಮನಸಲ್ಲಿ ಬೇಡ ಅಂತಾನೇ ಇರ್ತದೆ. ಹೇಳಿದ್ರೆ ಬಯ್ತಾನೆ ಅಂತ.. ಅಲ್ಲಿಗೆ ಸುಮ್ಮನಗಿರ್ತಾಳೆ. ಅಪ್ಪನಂತೂ ಏನೋ ಮಾತನಾಡಾದೆ ಖುಷಿಯಿಂದ ಹೋಗಿ ಬಾ ಮಗನೆ... ಅವರಸ್ಟೆ ತುಂಬಾನೆ ಮಾತನಾಡಲ್ಲ. ಮನಸಿನಳೋಗೆ ಖುಷಿ ಪಡ್ತಾರೆ. ತಮ್ಮ ನಂತೂ ಮೋಡಲೇ ಎಲ್ಲರಿಗೂ ಆಗಲೇ ಹೇಳಿಯಾಗಿತ್ತು. ಪ್ರತಿ ಸಾರಿ ನನ್ನ ವಿದೇಶ ಪ್ರಯಾಣದ ಮುಂಚಿನ ದಿನ ನನ್ನ ಬೆಂಗಳೂರಿನ ಮನೆಯಲ್ಲಿ ರೆಡಿ. ಅವನದೇ ಪ್ಯಾಕ್ಕಿಂಗ್ , ಅವನದೇ ಕಾರುಬಾರು. ಅವನ ಕೆಲಸದಲ್ಲಿ ಬ್ಯುಸಿ ಇದ್ದರು ಸಮಯ ಮಾಡ್ಕೊಂಡು ಬರ್ತಾನೆ. ಮನೆಯಿಂದ ಏನೋ ಅಮ್ಮ ಮಾಡಿದ ತಿಂಡಿ ತೆಕೊಂಡು ಬರ್ತಾನೆ. ಅಕ್ಕನಿಗೆ ಏನೋ ಹೆಮ್ಮೆ ... ನನ್ನ ಮುದ್ದಿನ ತಮ್ಮ ಪ್ರಪಂಚ ಸುತ್ತುತ್ತಾ ಇದ್ದನಲ್ವ... ಆಗಲೇ ಇದು ಮೂರನೇ ದೇಶ. ... ಕೌಂಟ್ ಸುರು ಆಗಿತ್ತು ... ನನ್ನ ವಿಸಿಟಿಂಗ್ ಕಾರ್ಡ್ ನೋಡಿ ಇನ್ನ ಈ ಕಂಪನಿ ಇಂದ ಇನ್ನ ಎಷ್ಟು ದೇಶ ಬಾಕಿ ಇದೆ ಅಂತ ಆಗಲೇ ಹೇಳಿಯಾಗಿತ್ತು ಅವಳಿಗೆ.

ಮೊನ್ನೆ ನಾನು ಬರೋ ಮುಂಚೆ ಬೆಲ್ಟ್ ತೆಗೆದುಕೊಳ್ಳಲು ಮರೆತಿದ್ದೆ . ಇರೋ ಬೆಲ್ಟ್ ಅಂತೂ ತುಂಬಾನೆ ಹಳತು. ಅದನ್ನ ನೋಡಿದ ತಮ್ಮ ಇಕೋ ನನ್ನ ಹೊಸ ಬೆಲ್ಟ್ ಅದು ನನಗೆ ಕೊಡು ಎಂದು ನನ್ನ ಹಳೆ ಬೆಲ್ಟ್ ತೆಕೊಂಡು ನನಗೆ ಹೊಸ ಬೆಲ್ಟ್ ಕೊಟ್ಬಿಟ್ಟ. ನನ್ನೊಂದಿಗೆ ಏರ್ಪೋರ್ಟ್ ತನಕ ಬಂದು ಚೆಕ್ಕಿಂಗ್ ಗೇಟ್ ಹತ್ರ ನನ್ನ ಮನಸಾರೆ ತಬ್ಬಿಕೊಂಡು ಹೋಗಿ ಬಾ ಅಣ್ಣ .. ಫೋನ್ ಮಾಡು.. ಅಂತ ಹೇಳಿ ನಾನು ಚೆಕ್ ಇನ್ ಅದ ಮೇಲೂ ಕೈ ಬೀಸುತ್ತ ಅಲ್ಲೇ ನಿಂತಿದ್ದ... ತನ್ನ ಪ್ರೀತಿಯ ನಗುವಿನೊಂದಿಗೆ...

ತುಂಬಾನೆ ಬರಿಯೋಕೆ ಆಗ್ತಾ ಇಲ್ಲ.. ಏನೇನೋ ಮನಸಲ್ಲಿ ಇದ್ದದ್ದನ್ನು ಗೀಚಿದ್ದೇನೆ ... ಅದೂನು ಕನ್ನಡ ದಲ್ಲಿ ಬರೆಯೋಕೆ ಸ್ವಲ್ಪ ಕಷ್ಟ ಅಗ್ತಾ ಇದೆ. ಸಮಯ ಇಲ್ಲ ಅಂತ ಹೇಳ್ತಾ ಇಲ್ಲ್ಲ... ಅದರೂ ಸ್ವಲ್ಪ ಸಮಯ ಕಡಿಮೆ ಇದೆ.... ಕೆಲಸ ಜಾಸ್ತಿ ಇದೆ.

ಏನೋ ...ಇಂತವರನ್ನು ಪಡೆಯಲು ನಾನಂತೂ ತುಂಬಾನೆ ಪುಣ್ಯ ಮಾಡಿರಬೇಕು. ತುಂಬಾನೆ ಮಿಸ್ ಮಾಡ್ತಾ ಇದ್ದೇನೆ ಇಲ್ಲಿ ನಾನು. ಅಪ್ಪ ಅಮ್ಮ ಅಕ್ಕ ತಮ್ಮ .... love u sooo much .... ಮೈಲುಗಳ ಆಚೆಯಿಂದ....  
                                               
                                                                                                                                ಪ್ರೀತಿಯಿಂದ ದಾಮು

ನೆನಪಿನ ಪುಟಗಳನ್ನು ತೆರೆದಾಗ..

ಅದೇ ಬಸ್ಸ್ಟಾಂಡ್. ಒಂದು ಮೂಲೆಯಲ್ಲಿ ಆತ  ಕೂತ್ಕೊಂಡಿದ್ದಾನೆ. ತುಂತುರು ಮಳೆ ಜಿನುಗುತ್ತಿತ್ತು. ಆತನ ಕಣ್ಣಲ್ಲಿ ಕಣ್ಣೀರ ಹನಿ ಇಣುಕುತ್ತಿತ್ತು ಒಂದು ಕಡೆಯಿಂದ ಬಸ್ಸಿಗಾಗಿ ಕರೆಯುವವರು ಮಡಿಕೇರಿ...ವಿರಾಜಪೇಟೆ...ಪೊನ್ನಂಪೇಟೆ...ಮತ್ತೊಂದು ಕಡೆಯಿಂದ ಕಡಲೆ, ಟೀ, ಕಾಫಿ ಮಾರುವವರ ಕೂಗಾಟ. ಇವರುಗಳ ಮಧ್ಯೆ ಈತನ ಕೂಗು ಯಾರಿಗಾದರು ಕೇಳಿಸೀತೆ?. ಅಲ್ಲಿದ್ದ ಪ್ರತಿಯೊಬ್ಬರೂ ಕಾರ್ಯ ಮಗ್ನವಾಗಿದ್ದರು ತಮ್ಮ ಬದುಕಿನ ಗುರಿಯತ್ತ ಸಾಗುವಲ್ಲಿ... ಆತನ ದುಃಖದಿಂದ ಕೂಡಿದ ಚಿಕ್ಕ ಮುಖ ನೋಡಿ ಬಸ್ಸ್ಟಾಂಡಿನ ಗೋಡೆಗಳೂ ನಿಸ್ಸಾಹಾಯಕವಾಗಿದ್ದವು. ಮಡಿಲ ಮಗುವೊಂದು ಅಮ್ಮನ ಸೆರಗಿನಿಂದ ಹೊರಗಿಣುಕಿ ನೋಡಿದಾಗ ಅವನಿಗೆ ಅಮ್ಮನ ನೆನಪಾಗದೆ ಇದ್ದೀತೆ?. ಮನೆಯ ನೆನಪಗಳು ಎದೆಯಂಗಳದಲ್ಲಿ ಹಾರಿಹೊಂದಂತೆ ನೋವಿನ ಗೆರೆಗಳು ಇನ್ನು ದಪ್ಪವಾಗಿದ್ದವು.

ಮೊದಲೇ ನಿರ್ಧರಿಸಿದಂತೆ ಆತ ಬೆಳಿಗ್ಗೆ ಆರಕ್ಕೆ ಹಾಸ್ಟೆಲಿನಿಂದ ಹೊರಬಂದಿದ್ದ. ಅಂದೇಕೋ ಸೋಮಾರಿ ಸೂರ್ಯನೂ ಮನೆ ಬಿಟ್ಟಿರಲಿಲ್ಲ. ತಳ್ಳುಗಾಡಿಯವರು ತರಕಾರಿ ತುಂಬಿದ ಗಾಡಿಗಳೊಂದಿಗೆ ಮುಂದೆ ಹೋಗುತ್ತಲೇ ಇದ್ದರು. ಆತನೂ ಮುಂದೆಕ್ಕೆ ಸಾಗಿದ್ದ ಗೊತ್ತು ಗುರಿಯಿಲ್ಲದೆ. ಚಿಲಿಪಿಗುಟ್ಟುತ್ತಿರುವ ಹಕ್ಕಿಗಳೂ ಆತನಿಗೆ ಸಾಥ್ ನೀಡದೆ ಹೋದವು. ಅಂತು ಇಂತೂ ಕೊನೆಗೆ ತಲುಪಿದ್ದು ಅದೇ ಗೊನಿಕೊಪ್ಪಲಿನ ಬಸ್ಸು ತಂಗುದಾಣ. ತರಾತುರಿಯಿಂದ ಓಡಾಡುವ ಬಸ್ಸುಗಳ , ಜನಗಳ ಮಧ್ಯೆ ಇವನು ಒಬ್ಬಂಟಿಯಾಗಿದ್ದ.

ಏನೋ ಇಂಜಿನಿಯರಿಂಗ್ ಓದಬೇಕೆಂಬ ಆಸೆಯಿಂದ ಇಂಜಿನಿಯರಿಂಗ್ ಕಾಲೇಜ್ ಸೇರಿದ್ದೂ ಆಯಿತು. ಕಾಲೇಜ್ ಹಾಸ್ಟೆಲ್ ಸೇರೋಣವೆಂದರೆ ಕೈಯಲ್ಲಿ ಅಸ್ಟೊಂದು ದುಡ್ಡಿಲ್ಲ. ಕಾಲೇಜ್ ಸ್ಟಾರ್ಟ್ ಆಗಿ ಎರಡು ದಿನ ಯಾರೋದೋ ಮನೆಯಲ್ಲಿ ಅಡ್ಜಸ್ಟ್ ಮಾಡಿದ್ದ. ಇನ್ನು ಮುಂದೆ? ಮಂಗಳೂರಿಂದ ಒಂದು ಹಳ್ಳಿಯಿಂದ ಬಂದ ಇವನಿಗೆ ಇಲ್ಲಿ ಗೊತ್ತಿರುವವರು ಯಾರು ಇರಲಿಲ್ಲ. ಸರಕಾರಿ ಹಾಸ್ಟೆಲ್ನಲ್ಲಿ ಕೇಳಿದಾಗ ಸೀಟ್ ಬರ್ತಿ ಆಗಿದೆ ಎಂಬ ಉತ್ತರ. ಗೋಣಿಕೊಪ್ಪಲು ಕಾಲೇಜಿನ ಕ್ಲೆರ್ಕಿನ ಸಹಾಯದಿಂದ ಸ್ವಲ್ಪ ದಿನದ ಮಟ್ಟಿಗೆ ಅಂತ ಸರಕಾರಿ ಹಾಸ್ಟೆಲಿನಲ್ಲಿ ಮತ್ತೆ ಅಡ್ಜಸ್ಟ್ ಮಾಡ್ಕೊಂಡ. ಹಾಸ್ಟೆಲಿನ ವಾರ್ಡನ್, ಮೇಲಾಧಿಕಾರಿಗಳಿಗೆ ಈ ವಿಷಯ ಗೊತ್ತಿಲ್ಲ.ಅಡುಗೆಯವರ ಮತ್ತು ಈತನ ಮಧ್ಯೆ ಒಳ ಒಪ್ಪಂದ! ದಿನಗಳು ಹೀಗೆ ಮುಂದುವರಿದವು. ಹಾಸ್ಟೆಲಿನ ದಿನಗಳನ್ನು ಬರೆಯಲು ಹೊರಟರೆ ಅವನಿಗೆ ಇನ್ನೊಂದು ಲೇಖನ ಬೇಕಾಗಬಹುದೇನೋ.

ಅಂದು ಅಕ್ಟೋಬರ್ ೨. ಗಾಂಧೀ ತಾತ ಹುಟ್ಟಿದ ದಿನ. ಹಾಸ್ಟೆಲಿನಲ್ಲಿ ತುಂಬಾ ಕಾರ್ಯಕ್ರಮಗಳಿದ್ದ ಕಾರಣ ಅಧಿಕಾರಿಗಳ ಆಗಮನ ಇತ್ತು. ಅಡುಗೆಯವರ ಸೂಚನೆಯಂತೆ ಅಂದು ಆತ ಹಾಸ್ಟೆಲಿನಲ್ಲಿ ಯಾರಿಗೂ ಸಿಗಬಾರದಾಗಿತ್ತು. ಅಧಿಕಾರಿಗಳಿಗೆ ಗೊತ್ತಾದರೆ ಹಾಸ್ಟೆಲಿನಿಂದ ಹೊರಗೆ ಹಾಕುವುದಂತೂ ಸತ್ಯ. ಅಡುಗೆಯವರೂ ಜೊತೆಗೆ. ಹಿಂದಿನ ದಿನ ನಿದ್ದೆಯಲ್ಲೂ ಅದೇ ಯೋಚನೆ. ನಾಳೆ ಬೆಳಿಗ್ಗೆ ೬ ಕ್ಕೆ ಸರಿಯಾಗಿ ಇಲ್ಲಿಂದ ಹೊರಡಬೇಕು ಅಷ್ಟೇ ಗೊತ್ತು. ಕೊನೆಗೆ ತಲುಪಿದ್ದು ಅದೇ ಗೊನಿಕೊಪ್ಪಲಿನ ಬಸ್ಸು ತಂಗುದಾಣ. ಇದರೊಂದಿಗೆ ಮೊದಲ ಸಾರಿ ಮನೆಯಿಂದ ಹೊರಗಡೆಗಿನ ವಾಸ ಅವನಿಗೆ ನುಂಗಲಾರದ ತುತ್ತಾಗಿತ್ತು. ಅಂತು ಹೇಗೋ ಆ ಒಂದು ದಿನವನ್ನು ದುಖದಲ್ಲಿಯೇ ಕಳೆದ. ರಾತ್ರಿ ಎಂಟು ಗಂಟೆಗೆ ಹಾಸ್ಟೆಲ್ಗೆ ಬಂದು ನಿದ್ರಾದೇವಿಗೆ ಶರಣಾದ. ಮತ್ತೆ ನೆನಪು ಕನಸುಗಳೊಂದಿಗೆ...ಆ ಮಗು ಮಾತ್ರ ಮತ್ತೆ ಮತ್ತೆ ಕಣ್ಣಂಚಿನ ಪರೆದೆಯಲ್ಲಿ ಬರುತ್ತಾ ಇತ್ತು.

ಇದು ನನ್ನ ಜೀವನದಲ್ಲಿ ನಡೆದ ನಿಜ ಘಟನೆ. ಮತ್ತೆ ಕಾಲೇಜ್ ಚೇಂಜ್ ಮಾಡಿ ಇಂಜಿನಿಯರಿಂಗ್ ಓದು ಮುಗಿಸಿದ್ದು ಈಗ ಇತಿಹಾಸ. ಬಾಲ್ಯದಲ್ಲಿನ ಬಡತನದಿಂದ ಕಳೆದ ಆ ದಿನಗಳಿಂದ ನಾನು ತುಂಬಾ ಕಲಿತೆ. ನಾನು ಯಾವಾಗಲೂ ಹೇಳ್ತುರ್ತೀನಿ "ಆವಾಗ ಮನೆಯಲ್ಲಿ ಮನಿ ಇರಲ್ಲಿಲ್ಲ, ಮಾನವೀಯತೆ ಇತ್ತು. "  ಪ್ರತಿಯೊಂದು ನೋವಿನಲ್ಲೂ ಒಂದೊಂದು ಪಾಠವಿರುತ್ತದೆ ಅಲ್ಲವೇ..?

ಸುಮ್ನೆ ಹೀಗೆ

ಮನದ ಭಾವನೆಗಳನ್ನು ಗೀಚಬೇಕೆಂಬ ಕನಸಿನೊಂದಿಗೆ ಬೆಡ್ ಮೇಲೆ ಬಿದ್ದುಕೊಂಡೆ ಪುಸ್ತಕ ಪೆನ್ನಿನ ಜೊತೆಗೆ. ಅದು ಯಾವಾಗ ನಿದ್ದೆ ಹತ್ತಿತೋ?. ಕನಸು ಕನಸಾಗಿಯೇ ಇತ್ತು. ಪೆನ್ನು ಪುಸ್ತಕದ ಖಾಲಿ ಖಾಲಿ ಹಾಳೆಗಳನ್ನು ನೋಡುತ್ತಾ ಅಲ್ಲೇ ಮಲಗಿತ್ತು. ಸೂರ್ಯ ಸೋಮಾರಿ ಆಗಲಿಲ್ಲ. ಅವನು ಆಗಲೇ ಎದ್ದು ಕಿಟಕಿನಂಚಿನಿಂದ ಇಣುಕುತಿದ್ದ. ನಾನೇ ಸೋಮಾರಿಯಾಗಿದ್ದೆ!
***************

ಏನೋ ತಪ್ಪು ಮಾಡಿದ್ದೇನೆಂದು ನೋವಿನಿಂದ ಕೂಡಿದ ಭಾರವಾದ ಮನಸ್ಸಿನಿಂದ  ಕಿಟಕಿಯಿಂದ ಇಣುಕಿ ನೋಡುತಲಿದ್ದೆ... ದೂರದಲ್ಲಿ ಮಗುವೊಂದು ತನ್ನ ಪುಟ್ಟ ಕಾಲುಗಳಿಂದ ತಪ್ಪು ತಪ್ಪು ಹೆಜ್ಜೆಗಳೊಂದಿಗೆ ನಡೆಯಲು ಪ್ರಯತ್ನಿಸುತ್ತಿತ್ತು.
***************

ಸ್ವಲ್ಪ ಕೆಲಸದ ಒತ್ತಡ ಜಾಸ್ತಿ ಇದ್ದುದರಿಂದ ಬಳಲಿದ್ದ ಅವಳಿಗೆ  ಬೆಡ್ ಮೇಲಿಂದ ಎದ್ದೇಳಲು ಏನೋ ಸುಸ್ತು. ಮನಸಿಲ್ಲದ ಮನಸ್ಸಿನಿಂದ ಮಸುಕು ತೆಗೆದು ಇನ್ನು ಕಾಫಿ ಮಾಡ್ಬೇಕಲ್ವ ಎಂದು ನೋಡಿದರೆ ಅಲ್ಲೇ ಪಕ್ಕದಲ್ಲಿ ಕಾಫಿ ಅವಳಿಗಾಗಿ ಕಾಯುತ್ತಿತ್ತು. ಅಡುಗೆಮನೆಯಿಂದ ಗಂಡ ಸುಮ್ನೆ ಮಲ್ಕೋ .... ನಾನಿದ್ದೇನೆ ಎಂದು ಕಣ್ಣು ಮಿಟುಕಿಸಿದಾಗ ಗಂಡನ ಮೇಲಿನ ಪ್ರೀತಿ ಇನ್ನು ಬೆಚ್ಚಗಾಗಿತ್ತು ಕಾಫಿಯ ಜೊತೆಗೆ.
ಸುಂದರ ಬದುಕಿನ ಅನೋನ್ಯತೆಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಎಷ್ಟು ಮುಖ್ಯ ಅಲ್ಲವೇ...ಸ್ವಲ್ಪ ತುಂಟತನ ತರಲೆಗಳೂ ಇದ್ದರೆ ಇನ್ನು ಖುಷಿ!!
***************

ಹೇಗೆ ಮರೆಯೋಕ್ಕಾಗುತ್ತೆ

ಕಳೆದ ಎರಡು ತಿಂಗಳಿಂದ ಕೆಲಸದ ನಿಮಿತ್ತ ಮರಳುಗಾಡು ಬಹರೈನಿನಲ್ಲಿ ಇರಬೇಕಾಗಿರುವುದರಿಂದ ಒಂಥರಾ ಒಂಟಿ ಜೀವನದ ಅನುಭವವನ್ನು ಪಡೆಯುತ್ತಿದ್ದೇನೆ ಎಂದರೆ ಅತಿಶಯವಾಗದು. ನನ್ನ ಬಾಲ್ಯದ ಮಧುರ ನೆನಪುಗಳೇ ನನಗೆ ಈಗ ಸಾಥ್ ನೀಡುತ್ತಿವೆ. ಅವುಗಳಲ್ಲಿ ಒಂದೆರಡನ್ನು ಅಕ್ಷರ ರೂಪಕ್ಕೆ ತಂದು ನಿಮ್ಮ ಮುಂದೆ ಇಟ್ಟಿದ್ದೇನೆ. ಓದಿ.. ಚೆನ್ನಾಗಿಲ್ಲಂದ್ರೆ ಬಯ್ಬೇಡಿ ಪ್ಲೀಸ್ ನಾ ...


ನನ್ನ ಹೈಸ್ಕೂಲ್ ಜೀವನದಲ್ಲಿ ನಡೆದ ಘಟನೆ:- ಎಲ್ಲಡೆ ಇರವಂತೆಯೇ ನಮ್ಮ ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡುವ ಮುಖಾಂತರ ತರಗತಿಗಳು ಪ್ರಾರಂಭವಾಗುತ್ತವೆ. ಎಲ್ಲರೂ ಸಾಲಾಗಿ ನಿಂತು ಗೌರವ ಕೊಡಬೇಕು. ನಾನು ಮತ್ತು ನನ್ನ ಬಾಲ್ಯ ಸ್ನೇಹಿತ ಜೊತೆಗೆ ನಿಂತೆರೆನೆ ಅದಕ್ಕೊಂದು ಮಜಾ. ಪ್ರಾರ್ಥನೆ ಸುರುವಾಗಿತ್ತು. ನಾನೇನೋ ಕೀಟಲೆ ಮಾಡಿದೆ ಗೆಳಯನಿಗೆ. ತರಲೆ , ಕೀಟಲೆ,ನಗುವುದು, ನಗಿಸುವುದು ನಮ್ಮ ಅಲಿಖಿತ ನಿಯಮವಾಗಿತ್ತು. ನಗುವನ್ನು ಹೊಟ್ಟೆಯೊಳಗಿಂದ ಒತ್ತರಿಸಿಕೊಳ್ಳಲು ಸಾಧ್ಯವಾಗದೇ ಗುಸುಕ್ಕೆಂದು ನಕ್ಕುಬಿಟ್ಟ. ನಾನೂ ಜೋರಾಗಿ ನಕ್ಕುಬಿಟ್ಟೆ. ಕ್ಲಾಸ್ ಟೀಚರ್ ನೋಡಬೇಕೇ? . ಹೊಡೆತದ ಜೊತೆಗೆ ಬೈಗುಳದ ಮಂಗಳಾರತಿ ಆಯಿತು. ನೋವಲ್ಲೂ ಖುಷಿಯಿತ್ತು ಬಿಡಿ. ಇನ್ನೊಂದು ಸಲ ಮಾಡಿದರೆ ಪ್ರಿನ್ಸಿಪಾಲ್ಗೆ ಕಂಪ್ಲೇಂಟ್ ಅಂತ ಗದರಿಸಿಬಿಟ್ರು. ಮಾಡಿದ ತಪ್ಪಿಗಾಗಿ ಮರುದಿನ ಪ್ರಾರ್ಥನಾ ಸಮಯದಲ್ಲಿ ಎಲ್ಲರ ಮುಂದೆ ಕ್ಷಮೆ ಕೇಳಬೇಕು ಎಂದು ಕಟ್ಟಪ್ಪಣೆ ಬೇರೆ. ಆಯಿತು ಮರುದಿನ ಎಲ್ಲರ ಮುಂದೆ ಹೋದೆವು. ಅದೇನೋ ಭಯ. ಸಾವಿಗಿಂತಲೂ ಹೆಚ್ಚಿನದ್ದು. ಎಲ್ಲರ ಮುಂದೆ ಹೋಗ್ಬೇಕಲ್ವ. ಕೈಮುಗಿದು ಒಕ್ಕೊರಲಿನಿಂದ "ಇನ್ನು ಮುಂದೆಂದೂ ಈ ತಪ್ಪು ಮಾಡಲ್ಲ. ನಮ್ಮನ್ನು ಕ್ಷಮಿಸಬೇಕು" ಎಂದೆವು. ಮರುಕ್ಷಣ ಮತ್ತೆ ಗೊಳ್ಳೆಂದು ನಗಬೇಕೇ... ಅಲ್ಲಿದ್ದ ಎಲ್ಲರೂ ನಮಗೆ ಸಾಥ್ ನೀಡಿ ಜೋರಾಗಿ!! ಕ್ಲಾಸ್ ಟೀಚರ್ ಜೊತೆಯಾದರು ನಮಗೆ ಅಂದರೆ ನಮ್ಮ ಪೋಕರಿತನ ಎಸ್ತಿರ್ಬೇಕು ನೀವೇ ಹೇಳಿ. ಮತ್ತೆ ಪ್ರಿನ್ಸಿಪಾಲ್ಗೆ ಕ್ಷಮಾಪನ ಪತ್ರ ಬರೆದು ಅಲ್ಲಿ ಸ್ವಲ್ಪ ಮಂಗಳಾರತಿ ಮಾಡಿಸ್ಕೊಂಡಿದ್ದು ಈಗ ಇತಿಹಾಸ.

ಕಳೆದು ಹೋದ ದಿನಗಳನ್ನು ನೆನಿಸಿಕೊಂಡರೆ ನಗು ಬರುತ್ತದೆ ಅಲ್ಲವೇ ? ದುರಾದ್ರಷ್ಟಕರ ಎಂದರೆ ಈ ಸವಿ ನೆನಪನ್ನು ಹಂಚಿಕೊಳ್ಳಲು ನನ್ನೊಂದಿಗಿಲ್ಲ ಅವನು. ವಿಧಿಯಾಟದಲ್ಲಿ ಸಿಕ್ಕಿ ಬರೀ ನೆನಪ್ಗಳನ್ನು ಬಿಟ್ಟು ಬಲು ದೂರ ಸಾಗಿದ್ದಾನೆ.

ಇನ್ನೊದು ಘಟನೆ :- ಇಂಜಿನಿಯರಿಂಗ್ ಕಾಲೇಜ್ಗೆ ಸೇರಿದ ಮೊದಲ ದಿನಗಳು. CET ಸ್ಪೆಷಲ್ ಕೌನ್ಸೆಲ್ಲಿಂಗ್ ಇದೆಯೆಂದು ಸುದ್ದಿಯಾಗಿತ್ತು. ಇನ್ನೇನು ಒಂದು ಕೈ ನೋಡೇ ಬಿಡೋಣವೆಂದು ನಮ್ಮ ನಿರ್ಧಾರ. ಗೆಳೆಯರಾದ ಲೋಕಿ, ಪ್ರಸನ್ನ ಮತ್ತು ನಾನು ಅರೆ ಮನಸ್ಸಿನಿಂದ ಹೊರಟೆವು. ಸುಳ್ಯದಿಂದ ಮೈಸೂರ್ ತನಕ ಬಸ್ಸ್ ಅಲ್ಲಿಂದ ಬೆಂಗಳೂರ್ ತನಕ ಟ್ರೈನಲ್ಲಿ ಹೋಗೊದಾಗಿ ಪ್ಲಾನ್ ಮಾಡಿದೆವು. ಯಾಕೇಂತ ಮತ್ತೆ ಹೇಳ್ತೀನಿ. ರಾತ್ರಿ ಒಂದು ಗಂಟೆಗೆ ಮೈಸೂರು ತಲುಪಿದೆವು.ಮತ್ತೆ ಕೊಡುವುದಾಗಿ ಹೇಳಿದ್ದ ಚಿಲ್ಲರೆ (೯೦) ನಿದ್ರೆಯ ಮಂಪರಿನಲ್ಲಿ ಕಂಡಕ್ಟರ್ ನಿಂದ ತೆಗೆದುಕೊಳ್ಳಲು ಮರೆತುಬಿಟ್ಟೆವು. ಕಂಡಕ್ಟರ್ ನೂ ಬೇಕಂತಲೇ ನಿದ್ದೆ ಮಾಡಿದ ಹಾಗೆ ನಟನೆ ಮಾಡಿದ್ನೇನೋ?. ಆದಿನದ ಮೊದಲ ಪೆಟ್ಟು ನಮ್ಮ ಕಿಸೆಗೆ. ಸವಾರಿ ಸಾಗಿತ್ತು ರೈಲ್ವೆ ಸ್ಟೇಷನತ್ತ . ನಮ್ಮ ಜೊತೆಗೆ ಬ್ಯಾಗುಗಳೂ!! . ಸ್ಟೇಷನಲ್ಲಿ ವಿಚಾರಿಸಿದಾಗ ಬೆಳಿಗ್ಗೆ ನಾಲ್ಕು ಗಂಟೆಗೆ ಬೆಂಗಳೂರು ರೈಲು ಎಂದು ಗೊತ್ತಾಯಿತು. ಏನ್ಮಾಡೋದು? ಪ್ಲಾಟ್ಫಾರಂ ಸುತ್ತಾಡಿ ಬರೋಣವೆಂದು ನುಗ್ಗಿದೆವು ಒಳಗಡೆ. ರಾಜಾರೋಷದಿಂದ ಸುತ್ತಾಡಿದೆವು ರೈಲ್ವೆ ಸ್ಟೇಷನ್ ನಮ್ಮದೇ ಎಂಬಂತೆ. ಎಲ್ಲಿಂದಲೋ ಬಂದ ಟ್ರೈನಿನಿಂದ ಪ್ರಯಾಣಿಕರು ಬಂದಿಳಿದರು. ಅವರ ಜೊತೆಗೆ ನಾವು ಸಾಗಿದೆವು. ಗೇಟ್ ಹತ್ತಿರ ನಿಂತಿದ್ದ ಇಬ್ಬರು ಕೆಲವರನ್ನು ತಡೆದು ಟಿಕೆಟ್ ತೋರಿಸೋಕೆ ಹೇಳ್ತಾ ಇದ್ದರು. ಇದೆಲ್ಲ ನಮಗಲ್ಲ ಎಂದು ನಾವು ಸೀದಾ ಮುಂದೆ ಹೋದೆವು. ಆ ಭೂಪರು ನಮ್ಮನ್ನೇ ಕರಿಬೇಕೆ? ಟಿಕೆಟ್ ಎಲ್ಲಿ ಅಂತ ಕೇಳಿದ. ಸಾರ್ ನಾವು ಸುಮ್ನೆ ಹೀಗೆ ಸುತ್ತಡೋಕೆ ಬಂದಿದ್ದು ಅಂತ ಹೇಳಿದೆವು . ತಪ್ಪು ನಿನ್ದೆ ಎಂಬಂತೆ!! ಇನ್ನೂ ಬಿಡದ ಅವನು ಪ್ಲಾಟ್ಫಾರಂ ಟಿಕೆಟ್ ಎಲ್ಲಿ ? ಜೀವನದಲ್ಲಿ ಮೊದಲ ಸಾರಿ ಕೇಳಿದ ಹಾಗೆ ನಮ್ಮಲ್ಲಿ ಇಲ್ಲ ಅಂತ ಸನ್ನೆ ಮಾಡಿದೆವು. ಅಲ್ಲೇ ಇದ್ದ ಸೆಕ್ಯೂರಿಟಿ ಜನರನ್ನು ಕರೆದು ನಮ್ಮನ್ನು ಕೋಣೆಯೊಳಗೆ ಕೂಡಿ ಹಾಕಲು ಹೇಳಿದ್ರು. ಅಯ್ಯೋಯೋ ಎಂಥ ಪಜೀತಿ ಆಗೊಯೋತು! ಈಗ ನಾವು ಮೂವರು ಕೋಣೆಯೊಳಗೆ ಕೈದಿಗಳ ತರಹ ! ಒಂದು ಗಂಟೆಯಾದ್ರೂ ಯಾರದು ಪತ್ತೆ ಇಲ್ಲ! ಒಂದು ಕಡೆಯಿಂದ ಭಯ. ಇನ್ನೊದು ಕಡೆಯಿಂದ ನಗು. ಕೊನೆಗೂ ಅಸಾಮಿಯೊಬ್ಬ ಬಂದು ಬನ್ನಿ ಎಂದ. ಎಲ್ಲಿ ? ಮುಂದೆ ಹೋದ ...ನಾವು ಅವನ ಹಿಂದೆ. ಯಾರೋ ಸ್ಟೇಷನ್ ಮಾಸ್ಟರ್ ಅಂತೆ . ಅವನತ್ರ ಹೋದೆವು. ಬೈಗುಳದ ಮಂಗಳರತಿಯಯಿತು. 800 ಫೈನ್ ಅಂದ. ಆದಿನದ ಎರಡೆನೆಯ ಪೆಟ್ಟು!! ಸಾರು ನಮಗೆ ಪ್ಲಾಟ್ಫಾರಂ ಟಿಕೆಟ್ ಬಗ್ಗೆ ಗೊತ್ತಿರಿಲಿಲ್ಲ. ನಾವು ಹೊಸಬ್ಬರು. ಬೆಂಗಳೂರಿಗೆ CET ಕೌನ್ಸೆಲಿಂಗ್ ಹೋಗ್ತಾ ಇದ್ದೇವಿ.ನಮ್ಮಲ್ಲಿ ಇರೋದೇ 800 ಅಂತೆಲ್ಲ ಸಬೂಬು ಹೇಳಿದೆವು. ಅವನು ಒಪ್ಪಬೇಕೆ..(ದುಡ್ಡು ಸಾರ್ ದುಡ್ಡು !) ಕೊನೆಗೆ ಹಾಗು ಹೀಗೂ ಮಾಡಿ 400 ಇಳಿಸಿದ ಅಸಾಮಿ. ನಷ್ಟದಲ್ಲಿ ಲಾಭ! ಅವತ್ತು ನಮ್ಮ ಮುಖ ನೋಡಬೇಕಿತ್ತು ನೀವು. ಅದೆಲ್ಲ ಮುಗಿದಾಗ ನಾಕು ಗಂಟೆ. ಟಿಕೆಟ್ ತೆಗೆದುಕೊಂಡು :) ಮತ್ತೆ ಸಾಗಿತು ನಮ್ಮ ಪ್ರಯಾಣ. ಬೆಂಗಳೂರಿನತ್ತ....

ಹೇಗೆ ಮರೆಯೋಕ್ಕಾಗುತ್ತೆ ಸಾರ್ ಆ ಪ್ಲಾಟ್ಫಾರಂ - ಟಿಕೆಟ್ ! ನೆನಪುಗಳು ನೆನೆಯಲಿಕ್ಕೆಂದೇ ಅಲ್ಲವೇ.

ಮನದ ಸಾಲುಗಳು

ಸಾವು ಏತಕೆ?
ಕಣ್ಣೀರ ಬರಿಸಲೆಂದೇ ಈ ಸಾವೇ?
ಮನವು ಕೇಳಿತು ನನ್ನ
ಉತ್ತರಿಸದಾದೆ ನಾ
ಬುದ್ದನನ್ನಾದರು ಕೇಳೋಣವೆಂದರೆ
ಅವನು ಸಾಸಿವೆ ತರಲು ಹೋಗಿದ್ದ!

ಸಿನೇಮಾ 
ಬದುಕು ಸಿನೆಮಾದಲ್ಲಿ ಒಬ್ಬನೇ ಪಾತ್ರಧಾರಿ
ಕಾಲವೇ ನಿರ್ದೇಶಕ
ಕಾಲವು ಚಲಿಸಿದಂತೆ ಪಾತ್ರಗಳು ಹೆಚ್ಚುತ್ತಾ ಹೋಗುತ್ತವೆ
ಒಂಥರಾ ಬಹುಪಾತ್ರಾಭಿನಯದ ಸಿನೆಮಾವಿದ್ದಂತೆ.

ಕನ್ನಡಿ
ಹುಡುಕಾಡಿದೆ ಅವಳಿಗಾಗಿ
ಜನಜಂಗುಳಿಯಲ್ಲಿ ಜಗದಂಗಳದಿ
ಎಲ್ಲೇಲ್ಲೂ ಕಂಡೆ ನನ್ನದೇ ಮುಖ
ಅವಳಾಗಿದ್ದಳು ಎನ್ನ ಮನದ ಕನ್ನಡಿ